ಹುಲಗೂರು
	ಭಾರತದ ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲ್ಲೂಕಿನ ಒಂದು ಗ್ರಾಮ. ಶಿಗ್ಗಾಂವಿಯ ಈಶಾನ್ಯಕ್ಕೆ 14 ಕಿಮೀ ದೂರದಲ್ಲೂ ಪುಣೆ-ಬೆಂಗಳೂರು ದಕ್ಷಿಣ-ಮಧ್ಯ ರೈಲ್ವೆಯ ಗುಡಿಗೇರಿ ನಿಲ್ದಾಣದಿಂದ 9 ಕಿಮೀ ದೂರದಲ್ಲಿದೆ. 

	ಈ ಗ್ರಾಮದ ಹಳೆಯ ಹೆಸರು ಪುಲಗನೂರು. ಇಲ್ಲಿ ಹನ್ನೊಂದು ಶಾಸನಗಳು ದೊರಕಿವೆ. 970ರ ಶಾಸನವೊಂದರಲ್ಲಿ ಗುತ್ತಿಯ ಗಂಗ ಪುಲಿಗೆರೆ 200ನ್ನು ಆಳುವಾಗ ಆತನ ಹೆಂಡತಿ ಅಂಕಬ್ಬರಸಿಯಳಿಂದ ಪುಲ್ಲುಂಗೂರಬ್ಬೆ ದೇವತೆಗೆ ಭೂಮಿ ಮತ್ತು ಸುಂಕದಾನ ಕೊಟ್ಟ ಬಗೆಗೆ ಉಲ್ಲೇಖವಿದೆ. ಈ ಪ್ರದೇಶ ರಾಷ್ಟ್ರಕೂಟ, ಚಾಳುಕ್ಯ, ಕಳಚುರಿ, ಸೇವುಣ ಮೊದಲಾದ ಅರಸುಮನೆತನಗಳ ಆಳಿಕೆಗೆ ಒಳಪಟ್ಟಿತ್ತೆಂದು ಶಾಸನಗಳ ಆಧಾರದಿಂದ ತಿಳಿಯುತ್ತದೆ. 

	ಗ್ರಾಮದ ಪಶ್ಚಿಮಕ್ಕೆ ಮುಕ್ಕಾಲು ಕಿಮೀ ಅಂತರದಲ್ಲಿ ನಾಲ್ಕು ಗೋರಿಗಳಿವೆ. ಇವು ಮುಸ್ಲಿಮ್ ಸಂತ ಹಜರತ್ ಶಹಾ ಖಾದ್ರಿ ಮನೆತನಕ್ಕೆ ಸೇರಿದವು. 1800ರ ಸುಮಾರಿಗೆ ಸವಣೂರಿನಲ್ಲಿ ನವಾಬ್ ಅಬ್ದುಲ್ ಕರೀಂಖಾನ್ ಆಳುತ್ತಿದ್ದಾಗ ಆತನ ಅಧೀನಕ್ಕೊಳಪಟ್ಟ ಬಂಕಾಪುರದಲ್ಲಿ ಹಜರತ್ ಶಹಾ ಖಾದ್ರಿ ಎಂಬ ಮುಸ್ಲಿಮ್ ಸಂತನಿದ್ದ. ನವಾಬ ಈ ಸಂತನ ಶಿಷ್ಯರಲ್ಲಿ ಓರ್ವ ಹೆಣ್ಣುಮಗಳಿಗೆ ಅಪಮಾನ ಮಾಡಲು ಹಜರತ್ ಶಹಾ ಆಗ ನವಾಬನಿಗೆ ಶಾಪವಿತ್ತು ಹುಲಗೂರಿಗೆ ಬಂದು ನೆಲಸಿದ. ಅಂದಿನಿಂದ ಹಜರತ್ ಶಹಾ ಖಾದ್ರಿ ಮನೆತನ ಇಲ್ಲಿ ಪ್ರಸಿದ್ಧವಾಯಿತು. ಈ ಸ್ಥಳ ದರ್ಗಾ ಎಂದೂ ಹೆಸರಾಗಿದೆ. ಎಲ್ಲ ಧರ್ಮದವರೂ ದರ್ಗಾಕ್ಕೆ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಪ್ರತಿವರ್ಷ ಈ ಸಂತನ ಸ್ಮರಣಾರ್ಥ ಫೆಬ್ರವರಿಯ ಸುಮಾರಿಗೆ ವೈಭವದಿಂದ ಉರುಸ್ ಜರುಗುತ್ತದೆ. ಬೆಳಗಾಂವಿ, ಧಾರವಾಡ ಜಿಲ್ಲೆಗಳಿಂದ ಜನ ಬಂದು ಈ ಉರುಸ್‍ನಲ್ಲಿ ಪಾಲ್ಗೊಳ್ಳುತ್ತಾರೆ. ಇಲ್ಲಿ ಸಿದ್ಧಲಿಂಗೇಶ್ವರ ದೇವಾಲಯವೂ ಇದೆ. ಇದೇ ಸಮಯಕ್ಕೆ ಇಲ್ಲಿಗೆ 43 ಕಿಮೀ ದೂರದಲ್ಲಿರುವ ಬಳ್ಳಾರಿ ಜಿಲ್ಲೆಯ ಮೈಲಾರದಿಂದಲೂ ಭಕ್ತಾದಿಗಳು ಬರುತ್ತಾರೆ. ಇದರಿಂದಾಗಿ ಈ ಗ್ರಾಮ ಗ್ರಾಮಾಂತರ ಪ್ರದೇಶದ ವಾಣಿಜ್ಯ ಕೇಂದ್ರವಾಗಿ ಬೆಳೆಯಲು ಸಾಧ್ಯವಾಗಿದೆ. ಇಲ್ಲಿ ಪ್ರತಿ ಭಾನುವಾರ ಸಂತೆಯಾಗುತ್ತದೆ. ಹಜರತ್ ಖಾದ್ರಿ ಸಂತನ ಹೆಸರಿನ ಪ್ರೌಢಶಾಲೆ ಇದೆ. ಹುಲಗೂರಿನ ಪೂರ್ವಕ್ಕೆ  ಶಿಶುನಾಳದಲ್ಲಿ ಶ್ರೇಷ್ಠ ತತ್ತ್ವಪದಗಳನ್ನು ರಚಿಸಿ ಹೆಸರಾದ ಶಿಶುನಾಳಶರೀಫರ ಗದ್ದುಗೆಯಿದೆ. ತಮ್ಮ ಗುರುಗಳೆಂದು ಸ್ವೀಕರಿಸಿ ಖಾದ್ರಿಯವರ ಭೇಟಿಗೆ ಶರೀಫರು ಈ ಊರಿಗೆ ಆಗಾಗ ಬಂದು ಹೋಗುತ್ತಿದ್ದರಂತೆ. ಅವರ ತತ್ತ್ವದ ಪದಗಳಲ್ಲಿ ಹುಲಗೂರಿನ ಉಲ್ಲೇಖವಿದೆ. ಈ ಊರಿಗೆ ಸುಮಾರು 6 ಕಿಮೀ ಅಂತರದಲ್ಲಿ ಪ್ರಸಿದ್ಧ ಕಾರಡಗಿ ವೀರಭದ್ರ ದೇವಸ್ಥಾನವಿದೆ. ಹುಲಗೂರಿಗೆ ಹುಬ್ಬಳ್ಳಿ, ಶಿಗ್ಗಾಂವಿಗಳಿಂದ ನೇರ ಬಸ್ ಸೌಕರ್ಯವಿದೆ. 

	(ಎಸ್.ಎಸ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ